Thursday, November 22, 2012

ದುರವಸ್ಥೆಯ ಆಗರ ಬಸವಕಲ್ಯಾಣದ ದೊಡ್ಡ ಕೆರೆ

ಬಸವಕಲ್ಯಾಣ  ತಾಲ್ಲೂಕಿನ ನಾರಾಯಣಪುರದ ಕೆರೆಯಲ್ಲಿ ಗಿಡಗಂಟೆಗಳು ಬೆಳೆದು ಹೂಳು ತುಂಬಿದ್ದರಿಂದ ನೀರು ಸಂಗ್ರಹಣೆಗೆ ಸಮಸ್ಯೆಯಾಗಿದೆ.ಈ ಕೆರೆ ಸುಮಾರು 300 ಹೆಕ್ಟೇರ್‌ನಷ್ಟು ವಿಶಾಲವಾಗಿದೆ. ತಾಲ್ಲೂಕಿನ ಅತಿ ದೊಡ್ಡ ಮತ್ತು ಹಳೆಯ ಕೆರೆಯಾಗಿದೆ. ಆದರೆ ಅಗತ್ಯ ಸಂರಕ್ಷಣೆ ಕೈಗೊಳ್ಳದೆ ದುರವಸ್ಥೆಗೆ ತಲುಪಿದೆ.

ಗುಣತೂರ, ಹುಲಗುತ್ತಿ ಮತ್ತು ನಾರಾಯಣಪುರ ತಾಂಡಾ ವ್ಯಾಪ್ತಿಯಲ್ಲಿನ ಪ್ರದೇಶದಿಂದ ಕೆರೆಗೆ ನೀರು ಬರುತ್ತದೆ. ಇಲ್ಲಿ ಹೆಚ್ಚಿನ ಗುಡ್ಡಗಾಡು ಪ್ರದೇಶ ಇರುವುದರಿಂದ ಮೊದಲಿನಿಂದಲೂ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹಗೊಳ್ಳುತ್ತದೆ. ಆದರೆ ಈಚೆಗೆ ಇದರಲ್ಲಿನ ಹೂಳು ತೆಗೆಯದ ಕಾರಣ ಮತ್ತು ಗಿಡಗಂಟಿಗಳು ಬೆಳೆದಿದ್ದರಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ.

ಮೊದಲು ಕೆರೆ ತುಂಬಿರುತ್ತಿದ್ದುದರಿಂದ ನೂರಾರು ಎಕರೆ ಪ್ರದೇಶಕ್ಕೆ ಕಾಲುವೆಗಳ ಮೂಲಕ ನೀರು ಹರಿಸಲಾಗುತಿತ್ತು. ಆದರೆ ಹತ್ತು ವರ್ಷಗಳಿಂದ ಕಾಲುವೆಗಳಿಗೆ ಆಗೊಮ್ಮೆ ಈಗೊಮ್ಮೆ ಮಾತ್ರ ನೀರು ಬಿಡಲಾಗುತ್ತದೆ. ಹೀಗಾಗಿ ಬೆಳೆಗಳಿಗೆ ನೀರಿನ ಕೊರತೆಯಾದಾಗ ರೈತರು ಕೆರೆ ನೀರು ಬರುತ್ತದೆ ಎಂದು ನಂಬಿ ಕುಳಿತುಕೊಂಡು ಹಾನಿ ಅನುಭವಿಸಬೇಕಾಗುತ್ತಿದೆ.

ನಾರಾಯಣಪುರ ಗ್ರಾಮಕ್ಕೆ ಇಲ್ಲಿಂದಲೇ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಸಣ್ಣ ನೀರಾವರಿ ಇಲಾಖೆಯವರು ಇಲ್ಲಿ ಕೆಲ ಸಲ ಹೂಳು ತೆಗೆಯುವ ಕಾರ್ಯ ಕೈಗೊಂಡಿದ್ದಾರೆ. ಆದರೆ, ಕಾಟಾಚಾರಕ್ಕೆ ಕಾಮಗಾರಿ ನಡೆದಿದ್ದು ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಇಲ್ಲಿನ ಪೂರ್ಣ ಪ್ರಮಾಣದ ಹೂಳು ತೆಗೆಯಬೇಕು. ಕೆರೆಗೆ ಹೆಚ್ಚಿನ ನೀರು ಹರಿದು ಬರುವಂತಾಗಲು ಹಿಂಬದಿಯ ನಾಲೆಗಳ ಸುಧಾರಣಾ ಕಾರ್ಯ ಕೈಗೊಳ್ಳಬೇಕು. ಗಿಡಗಂಟಿಗಳನ್ನು ತೆಗೆದು ಹಾಕಬೇಕು ಎಂದು ಜನರು ಆಗ್ರಹಿಸಿದ್ದಾರೆ.


Source:http://prajavani.net/include/story.php?news=109464&section=3&menuid=10

No comments:

Post a Comment